“ಇಸ್ಕೋ ದೇಖಿಯೇ! ಮರ್ ಗಯಾ ಹೈ… ಔರ್ ಚಲ್ ರಹಾ ಹೈ [ಇವನನ್ನು ನೋಡಿ! ಸತ್ತಿದ್ದಾನೆ ಆದ್ರೆ ನಡೀತಿದ್ದಾನೆ].”
ಅಮಿತ್ ಮರಾಂಡಿ ಇತ್ತೀಚೆಗೆ ಹೆಚ್ಚು ನಗುವಿನ ಕೇಂದ್ರ ಬಿಂದುವಾಗಿದ್ದಾರೆ. ಇಂದೂ ಅದೇ ಆಗಿದ್ದರು. ಅವರು ಮಚಾನ್ (ಮರದ ಬೆಂಚ್) ಕಡೆ ನಡೆಯುತ್ತಿದ್ದರೆ ಅಲ್ಲಿದ್ದ ಅವರ ಐದಾರು ಗೆಳೆಯರು ಅವರನ್ನು ನೋಡಿ ನಗುತ್ತಿದ್ದರು.
32 ವರ್ಷದ ಅಮಿತ್ ಕೂಡಾ ಒಂದಷ್ಟು ಹೊತ್ತು ನಕ್ಕರು. ನಂತರ ಅವರ ಮುಖಭಾವ ಬದಲಾಯಿತು. "ದೇಖ್ ಲಿಜಿಯೇ,ಹಮ್ ಜಿಂದಾ ಹೈ ಲೇಕಿನ್ ಹಮ್ಕೋ ಮಾರ್ ದಿಯಾ ಹೈ [ನೋಡಿ ನಾನು ಜೀವಂತ ಇದ್ದೇನೆ. ಆದರೆ ನನ್ನನ್ನು ಸಾಯಿಸಲಾಗಿದೆ].”
ಬಿಹಾರದ ಲೋಹಸಿಂಘ್ನಾ ಈ ದಿನಗೂಲಿ ಕಾರ್ಮಿಕ ಇತ್ತೀಚೆಗೆ ಪ್ರಕಟವಾದ ಪರಿಷ್ಕೃತ ಮತದಾರರ ಪಟ್ಟಿಯ ಕುರಿತು ಮಾತನಾಡುತ್ತಿದ್ದಾರೆ. ಆ ಪಟ್ಟಿಯಲ್ಲಿ ಸತ್ತಿದ್ದಾರೆಂದು ಗುರುತಿಸಲಾಗಿರುವ ಮತದಾರರಲ್ಲಿ ಇವರೂ ಒಬ್ಬರು. ಮತದಾರರ ಹೆಸರುಗಳ ವಿಶೇಷ ಪರಿಷ್ಕರಣೆ (ಎಸ್ಐಆರ್) ಸಂದರ್ಭದಲ್ಲಿ ಈ ಆಘಾತಕಾರಿ ಪಟ್ಟಿಯನ್ನು ತಯಾರಿಸಲಾಗಿತ್ತು. ಚುನಾವಣಾ ಪಟ್ಟಿಯಿಂದ ಅನರ್ಹ ಮತದಾರರನ್ನು ತೆಗೆದುಹಾಕಲು ಚುನಾವಣಾ ಆಯೋಗವು ರಾಜ್ಯದಲ್ಲಿ ಈ ಅಭಿಯಾನವನ್ನು ಕೈಗೊಂಡಿತ್ತು. ಆದರೆ, ಇಲ್ಲಿ ಲೋವಾ ಟೋಲಾದಲ್ಲಿ ಅನೇಕ ಅರ್ಹ ಆದಿವಾಸಿ ಮತದಾರರನ್ನು 'ಸತ್ತವರು' ಎಂದು ತೆಗೆದುಹಾಕಲಾಗಿದೆ. ಫೋನ್ ಮೂಲಕ, ಅಮಿತ್ನ ಹೆಸರು ಪಟ್ಟಿಯಲ್ಲಿರುವುದರ ಕುರಿತು ನಾನು ಸ್ಥಳೀಯ ಮೂಲಗಳಿಗೆ ಎಚ್ಚರಿಕೆ ತಲುಪಿಸಿದ್ದೆ.
ಆ ಪಟ್ಟಿಯಲ್ಲಿ ತನ್ನ ಹೆಸರೂ ಇರುವುದು ಅವರಿಗೆ ಬೇಸರ ತರಿಸಿದೆ: "ಬೂರಾ ತೋ ಲಗ್ತಾ ಹೈ ನಾ [ಏನಾದರೂ ಬೇಜಾರಾಗತ್ತೆ ಅಲ್ವ?]."
ನಾನು – ಒಂದು ಆದಿವಾಸಿ ಹಳ್ಳಿ – ಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಇದ್ದೆ. ನನ್ನ ಕೈಯಲ್ಲಿ ಬೂತ್ ಸಂಖ್ಯೆ 223 ರ ತೆಗೆದುಹಾಕಿದ ಮತದಾರರ ಪಟ್ಟಿಯಿತ್ತು. ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಅಳಿಸಲಾದ ಮತದಾರರ ಪಟ್ಟಿಗಳನ್ನು ಯಾದೃಚ್ಛಿಕವಾಗಿ ಪರಿಶೀಲಿಸುತ್ತಿದ್ದಾಗ ಈ ಗ್ರಾಮವು ನನಗೆ ಸಿಕ್ಕಿತು. ಆ ರೀತಿ ಹುಡುಕುತ್ತಿದ್ದಾಗ ಲೋಹಸಿಂಘ್ನಾ ಗ್ರಾಮದ ಬೂತ್ 223ರ ಪಟ್ಟಿ ನನ್ನ ಕಣ್ಣಿಗೆ ಬಿತ್ತು, ಅದರಲ್ಲಿ ಅನೇಕ ಆದಿವಾಸಿ ಹೆಸರುಗಳನ್ನು ಅಳಿಸಿಹಾಕಲಾಗಿತ್ತು.
ಲೋವಾ ಟೋಲಾ ಸಂತಾಲ್ ಆದಿವಾಸಿಗಳೇ ಇರುವ ಒಂದು ಊರು. ಇದಕ್ಕೆ ಈ ಹೆಸರು ಒಂದು ಮರದ ಕಾರಣ ಬಂದಿದೆ. ದುಮಾರ್ ಅಥವಾ ಗುಲಾರ್ (ಗೊಂಚಲು ಅಂಜೂರ) ಮರವನ್ನು ಸಂತಾಲಿ ಭಾಷೆಯಲ್ಲಿ ಲೋವಾ ಎಂದು ಕರೆಯಲಾಗುತ್ತದೆ. ಸಂತಾಲಿ ಭಾಷೆಯು ಆಸ್ಟ್ರೋಏಷ್ಯಾಟಿಕ್ ಭಾಷೆಯಾಗಿದ್ದು, ಇದನ್ನು ಭಾರತದಲ್ಲಿ ಸುಮಾರು 74 ಲಕ್ಷ ಜನರು ಮಾತನಾಡುತ್ತಾರೆ.
ಸ್ಥಳೀಯರು ಹೇಳುವ ಪ್ರಕಾರ, ಅವರ ಹಳ್ಳಿ ಅಥವಾ ಟೋಲಾದಲ್ಲಿ ಹಿಂದೆ ಒಂದು ಕಾಲದಲ್ಲಿ ಬೃಹತ್ ಅಂಜೂರದ ಮರವಿತ್ತು, ಅದೇ ಮರ ಹೆಚ್ಚಾಗಿ ಮಣ್ಣು ಮತ್ತು ಹುಲ್ಲಿನ ಛಾವಣಿಯ ಮನೆಗಳನ್ನು ಹೊಂದಿರುವ ಈ ಸಂತಾಲಿ ಹಳ್ಳಿಯ ಗುರುತಾಯಿತು. 2022-2023ರ ಬಿಹಾರ ಜಾತಿ ಸಮೀಕ್ಷೆಯು ಹೇಳುವಂತೆ, ಹೆಚ್ಚಿನ ಸಂತಾಲಿ ಜನರ ಸರಾಸರಿ ತಿಂಗಳ ಆದಾಯ ಸುಮಾರು 6,000 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ. ಸುಮಾರು ಐವರಲ್ಲಿ ಒಬ್ಬ ಸಂತಾಲಿ ಆದಿವಾಸಿ ಸಣ್ಣ ಅಥವಾ ಹಿಡುವಳಿ ರೈತರಾಗಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಉಳಿದವರು, ಅಮಿತ್ ಅವರಂತೆ, ಕೂಲಿ ಕೆಲಸ ಮಾಡುತ್ತಾರೆ – ಅವರು ಪಾಟ್ನಾದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಾರೆ.





















